ಬಾದಾಮಿ ಗುಹೆ ದೇವಾಲಯಗಳು -ಭಾರತದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಹಿಂದೂ ಮತ್ತು ಜೈನ ಗುಹಾ ದೇವಾಲಯಗಳ ಸಂಕೀರ್ಣವಾಗಿದೆ. ಗುಹೆಗಳು ಬಂಡೆಗಳಲ್ಲಿ ಕೊರೆದ ಭಾರತದಲ್ಲಿನ ವಾಸ್ತುಶಿಲ್ಪದ, ವಿಶೇಷವಾಗಿ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖ ಉದಾಹರಣೆಗಳಾಗಿವೆ, ಅವುಗಳಲ್ಲಿ ಕೆಲವು 6 ನೇ ಶತಮಾನದ್ದಾಗಿವೆ. ಬಾದಾಮಿಯನ್ನು ಹಿಂದೆ ವಾತಾಪಿ ಬಾದಾಮಿ ಎಂದು ಕರೆಯಲಾಗುತ್ತಿತ್ತು, ಇದು 6 ನೇ ಶತಮಾನದಿಂದ 8 ನೇ ಶತಮಾನದವರೆಗೆ ಕರ್ನಾಟಕದ ಬಹುಭಾಗವನ್ನು ಆಳಿದ ಚಾಲುಕ್ಯ ರಾಜವಂಶದ ರಾಜಧಾನಿಯಾಗಿತ್ತು. ಬಾದಾಮಿಯು ಒಂದು ಮಾನವ ನಿರ್ಮಿತ ಸರೋವರದ ಪಶ್ಚಿಮ ದಂಡೆಯ ಮೇಲೆ ಇದ್ದು ಕಲ್ಲಿನ ಮೆಟ್ಟಿಲುಗಳನ್ನು ಹೊಂದಿರುವ ಮಣ್ಣಿನ ಗೋಡೆಯಿಂದ ಸುತ್ತುವರಿದಿದೆ; ನಂತರದ ಕಾಲದಲ್ಲಿ ಕಟ್ಟಲಾದ ಕೋಟೆಗಳಿಂದ ಉತ್ತರ ಮತ್ತು ದಕ್ಷಿಣದಲ್ಲಿ ಸುತ್ತುವರಿದಿದೆ. ಬಾದಾಮಿ ಗುಹೆ ದೇವಾಲಯಗಳು ಡೆಕ್ಕನ್ ಪ್ರದೇಶದ ಪ್ರಾಚೀನ ಹಿಂದೂ ದೇವಾಲಯಗಳ ಉದಾಹರಣೆಗಳಾಗಿವೆ. ಅವು ಮತ್ತು ಐಹೊಳೆಯಲ್ಲಿನ ದೇವಾಲಯಗಳು ಮಲಪ್ರಭಾ ನದಿಯ ಕಣಿವೆಯನ್ನು ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲನ್ನಾಗಿ ಮಾರ್ಪಡಿಸಿದರು, ಈ ವಾಸ್ತುಶಿಲ್ಪವು ಭಾರತದ ಇನ್ನಿತರ ಕಡೆಯ ನಂತರದ ದೇವಾಲಯಗಳ ಘಟಕಗಳ ಮೇಲೆ ಪ್ರಭಾವ ಬೀರಿತು. 1 ರಿಂದ 4 ನೇ ಗುಹೆಗಳು ಪಟ್ಟಣದ ಆಗ್ನೇಯ ದಿಕ್ಕಿನಲ್ಲಿರುವ ಮೃದುವಾದ ಬಾದಾಮಿ ಮರಳುಗಲ್ಲಿನ ರಚನೆಯಲ್ಲಿ ಬೆಟ್ಟದ ತುದಿಯಲ್ಲಿವೆ. ಮೊದಲನೇ ಗುಹೆಯಲ್ಲಿ, ಹಿಂದೂ ದೈವಗಳ ಮತ್ತು ವಿಷಯಗಳ ವಿವಿಧ ಶಿಲ್ಪಗಳಿದು, ತಾಂಡವ-ನೃತ್ಯದ ಶಿವನ ನಟರಾಜವಿಗ್ರಹವು ಪ್ರಮುಖವಾದ ಕೆತ್ತನೆಯಾಗಿದೆ. ಎರಡನೆಯ ಗುಹೆಯು ಅದರ ವಿನ್ಯಾಸ ಮತ್ತು ಆಯಾಮಗಳ ದೃಷ್ಟಿಯಿಂದ ಹೆಚ್ಚಾಗಿ ಮೊದಲನೆಯ ಗುಹೆಯನ್ನು ಹೋಲುತ್ತದೆ, ಇದರಲ್ಲಿ ಹಿಂದೂ ವಿಷಯಗಳಿವೆ, ಇದರಲ್ಲಿ ವಿಷ್ಣುವಿನ ತ್ರಿವಿಕ್ರಮನ ಮೂರ್ತಿಯು ದೊಡ್ಡದಾಗಿದೆ. ಮೂರನೇಯ ಗುಹೆಯು ಅತಿದೊಡ್ಡ ಗುಹೆಯಾಗಿದ್ದು , ಇದು ವಿಷ್ಣುವಿಗೆ ಸಂಬಂಧಿಸಿದ್ದು ಇದು ಈ ಗುಹಾ ಸಂಕೀರ್ಣದಲ್ಲಿಯೇ ಅತ್ಯಂತ ನಾಜೂಕಾದ ಕೆತ್ತನೆಗಳನ್ನು ಹೊಂದಿದೆ. ನಾಲ್ಕನೇ ಗುಹೆಯು ಜೈನ ಧರ್ಮದ ಪೂಜ್ಯ ವ್ಯಕ್ತಿಗಳಿಗೆ ಸಮರ್ಪಿತವಾಗಿದೆ. ಸರೋವರದ ಸುತ್ತ, ಬಾದಾಮಿಯು ಹೆಚ್ಚುವರಿ ಗುಹೆಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ಬೌದ್ಧ ಗುಹೆಯಾಗಿರಬಹುದು. ಮತ್ತೊಂದು ಗುಹೆಯನ್ನು 2015 ರಲ್ಲಿ ಕಂಡುಹಿಡಿಯಲಾಯಿತು, ಇದು ನಾಲ್ಕು ಮುಖ್ಯ ಗುಹೆಗಳಿಂದ ಸುಮಾರು 500 ಮೀಟರ್ (1,600 ಅಡಿ) ದೂರದಲ್ಲಿದ್ದು , 27 ಹಿಂದೂ ಕೆತ್ತನೆಗಳನ್ನು ಹೊಂದಿದೆ. == ಭೌಗೋಲಿಕ ಮಾಹಿತಿ == ಬಾದಾಮಿ ಗುಹೆ ದೇವಾಲಯಗಳು ಭಾರತದ ಕರ್ನಾಟಕದ ಉತ್ತರ-ಮಧ್ಯ ಭಾಗದಲ್ಲಿರುವ ಬಾದಾಮಿ ಪಟ್ಟಣದಲ್ಲಿವೆ. ದೇವಾಲಯಗಳು ಬೆಳಗಾವಿಯಿಂದ ಪೂರ್ವಕ್ಕೆ 88 ಮೈಲುಗಳು (142 ಕಿಮೀ) , ಮತ್ತು ಹಂಪಿಗೆ ವಾಯುವ್ಯದಲ್ಲಿ 87 ಮೈಲಿಗಳು (140 ಕಿಮೀ). ಮಲಪ್ರಭಾ ನದಿಯು 3 ಮೈಲಿ (4.8 ಕಿಮೀ) ದೂರದಲ್ಲಿದೆ. ಈ ಗುಹೆ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲಿನಿಂದ 14 ಮೈಲಿ (23 ಕಿಮೀ) ಮತ್ತು ನೂರಕ್ಕೂ ಹೆಚ್ಚು ಪ್ರಾಚೀನ ಮತ್ತು ಮಧ್ಯಕಾಲೀನ ಯುಗದ ಹಿಂದೂ, ಜೈನ ಮತ್ತು ಬೌದ್ಧ ಸ್ಮಾರಕಗಳನ್ನು ಹೊಂದಿರುವ ಇನ್ನೊಂದು ತಾಣವಾದ ಐಹೊಳೆಯಿಂದ 22 ಮೈಲಿ (35 ಕಿಮೀ) ದೂರದಲ್ಲಿವೆ. 6 ನೇ ಶತಮಾನದಲ್ಲಿ ಚಾಲುಕ್ಯ ರಾಜವಂಶದ ರಾಜಧಾನಿಯಾಗಿದ್ದ ಬಾದಾಮಿಯನ್ನು, ವಾತಾಪಿ, ವಾತಾಪಿಪುರ, ವಾತಾಪಿನಗರಿ ಮತ್ತು ಅಗಸ್ತ್ಯ ತೀರ್ಥ ಎಂದು ಐತಿಹಾಸಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ,. ಇದು ಎರಡು ಕಡಿದಾದ ಪರ್ವತ ಬಂಡೆಗಳ ನಡುವಿನ ಕಂದರವು ಕೊನೆಯಾಗುವ ಸ್ಥಳದಲ್ಲಿದೆ. ಪಟ್ಟಣದ ಆಗ್ನೇಯ ದಿಕ್ಕಿನಲ್ಲಿರುವ ಗುಡ್ಡದ ನಾಲ್ಕು ಗುಹೆ ದೇವಾಲಯಗಳನ್ನು ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ. ಕಲ್ಲಿನ ಮೆಟ್ಟಿಲುಗಳನ್ನು ಹೊಂದಿರುವ ಮಣ್ಣಿನ ಅಣೆಕಟ್ಟಿನಿಂದ ರಚಿಸಲಾದ ಅಗಸ್ತ್ಯ ತೀರ್ಥ ಎಂಬ ಮಾನವ ನಿರ್ಮಿತ ಸರೋವರದ ಮೇಲಿದೆ. ಈ ಬಂಡೆಯ ಪಶ್ಚಿಮ ತುದಿಯಲ್ಲಿ, ಅದರ ಅತ್ಯಂತ ಕೆಳ ಹಂತದಲ್ಲಿ, ಮೊದಲ ಗುಹೆ ದೇವಾಲಯವಿದೆ. ಅತಿದೊಡ್ಡ ಮತ್ತು ಅತಿ ಎತ್ತರವಾದ ಮೂರನೇ ಗುಹೆಯು, ಇದು ಬೆಟ್ಟದ ಉತ್ತರದ ಮುಖದಲ್ಲಿ ಪೂರ್ವಕ್ಕೆ ಇದೆ.. ನಾಲ್ಕನೇ ಗುಹೆಯು ಪೂರ್ವಕ್ಕೆ ಕೆಲವು ಹಂತಗಳ ಕೆಳಗೆ ಇದೆ. ಅ == ಇತಿಹಾಸ == ಒಂದರಿಂದ ನಾಲ್ಕನೇಯ ಸಂಖ್ಯೆಯ ಗುಹೆಗಳನ್ನು ಅವುಗಳನ್ನು ನಿರ್ಮಿಸಿದ ಕಾಲಕ್ರಮದಲ್ಲಿಯೇ ಹೆಸರಿಸಲಾಗಿದೆ. ಇವುಗಳನ್ನು ಚಾಲುಕ್ಯರ ರಾಜಧಾನಿಯಾದ ಬಾದಾಮಿಯಲ್ಲಿ (ಇವರನ್ನು ಆರಂಭಿಕ ಚಾಲುಕ್ಯರೆಂದು ಕರೆಯುತ್ತಾರೆ ) ೬ನೇ ಶತಮಾನದ ಅಂತ್ಯಭಾಗದ ನಂತರ ನಿರ್ಮಿಸಲಾಯಿತು. ವಿಷ್ಣುವಿಗೆ ಸಮರ್ಪಿತವಾದ ೩ನೇ ಗುಹೆಯ ಕಾಲವು ಮಾತ್ರ ಖಚಿತವಾಗಿ ತಿಳಿದಿದೆ. ಆಲ್ಲಿ ಪತ್ತೆಯಾದ ಶಾಸನದಲ್ಲಿ ವಿಷ್ಣುವಿನ ಆ ದೇವಾಲಯವನ್ನು ಶಕ ೫೦೦ ( ಅಂದರೆ ಕ್ರಿ.ಶ. ೫೭೮-೫೭೯) ರಲ್ಲಿ ಮಂಗಳೇಶನು ಸಮರ್ಪಿಸಿದನೆಂದು ಹೇಳಿದೆ. ಹಳೆಗನ್ನಡದಲ್ಲಿ ಇರುವ ಈ ಶಾಸನವು ಈ ಗುಹಾಲಯಗಳನ್ನು ೬ನೇ ಶತಮಾನದವು ಎಂದು ಗುರುತಿಸಲು ಸಹಾಯಕವಾಗಿವೆ . ಇದರಿಂದಾಗಿ ಈ ಗುಹೆಯು ಖಚಿತವಾಗಿ ಕಾಲನಿರ್ಣಯ ಮಾಡಿದ ಅತ್ಯಂತ ಹಳೆಯ ಹಿಂದೂ ಗುಹಾ ದೇವಾಲಯವಾಗಿದೆ. ನಂತರದ ಹಿಂದೂ ದೇವಾಲಯಗಳಿಗೆ ಮಾದರಿಯಾಗಿ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎಂದು ಪರಿಗಣಿಸಲಾದ ಮಲಪ್ರಭಾ ನದಿ ಕಣಿವೆಯಲ್ಲಿನ ಈ ಬಾದಾಮಿ ಗುಹೆಗಳ ಈ ಸಂಕೀರ್ಣವು ಯುನೆಸ್ಕೋದಿಂದ ಗೊತ್ತುಪಡಿಸಿದ "ದೇವಾಲಯದ ವಾಸ್ತುಶಿಲ್ಪದ ವಿಕಸನ-ಐಹೊಳೆ-ಬಾದಾಮಿ-ಪಟ್ಟದಕಲ್ಲು" ಶೀರ್ಷಿಕೆಯಡಿಯಲ್ಲಿ ವಿಶ್ವ ಪರಂಪರೆಯ ತಾಣದ ಅಭ್ಯರ್ಥಿಯ ಭಾಗವಾಗಿದೆ . == ಉಲ್ಲೇಖಗಳು ==